KUSUBOORU KERE.
ಕುಸುಬೂರು ಕೆರೆ.
ಕುಶಾಲನಗರದಿಂದ ಸೋಮವಾರಪೇಟೆಗೆ ಹೋಗುವ ದಾರಿಯಲ್ಲಿ ಘಟ್ಟಪ್ರದೇಶದ ತಿರುವೊಂದರಲ್ಲಿ ಎಡಭಾಗಕ್ಕೆ ಸುಂದರ ದೃಶ್ಯವೊಂದು ಹಠಾತ್ತನೆ ಅನಾವರಣಗೊಳ್ಳುತ್ತದೆ. ಕಾಫಿಎಸ್ಟೇಟಿನವರು ಬೆಟ್ಟದಿಂದಿಳಿವ ನೀರನ್ನು ತಡೆದು ನಿಲ್ಲಿಸಿ, ಒಂದು ಸಣ್ಣ ಕೆರೆಯನ್ನು ನಿರ್ಮಿಸಿಕೊಂಡಿದ್ದಾರೆ. ಫಾಲ್ಗುಣ-ವೈಶಾಖಗಳ ಹೊರತು ಅಲ್ಲಿ ನೀರು ಇದ್ದೇ ಇರುತ್ತದೆ. ಈ ತಾಣವು ನನಗೆ ಪರಮಪ್ರಿಯವಾದ್ದರಿಂದ ಆಗಾಗ ಅತ್ತ ಕ್ಯಾಮರಾ ತಿರುಗಿಸುವುದು ರೂಢಿ.
ಈ ಸಂದರ್ಭದಲ್ಲಿ ನನ್ನ ಆಶಯವೇನಿದ್ದರೂ ಪ್ರತಿಬಿಂಬದ ಕಡೆಗೇ ಆದರೂ, ಪೂರಕ ಅಂಶಗಳನ್ನೂ ಇಲ್ಲಿ ಸೇರಿಸಲೇಬೇಕೆಂಬುದು ನನ್ನ ವಾದವಾಗಿತ್ತು. ಮುನ್ನೆಲೆಯೆಲ್ಲಿ ಕಾಣುವ ಮಣ್ಣು-ಬಣ್ಣವು ಇಡೀ ಚಿತ್ರವನ್ನು ಆವರಿಸಿರುವ ಹಸಿರು-ನೀಲಿ ಬಣ್ಣಗಳ ಮೇಲಾಟವನ್ನು ತಗ್ಗಿಸುತ್ತದೆ. ತೆಂಗಿನಮರಗಳ ಸಾಲು, ಈ ಪರಿಸರದ ಮಧ್ಯೆ ವಿಶಿಷ್ಟವಾದ ಅಸ್ಮಿತೆಯನ್ನುಂಟುಮಾಡುತ್ತಿದೆ- ತನ್ನ ಎತ್ತರದ ನಿಲುವಿನಿಂದ. [ಕೊಡಗಿನಲ್ಲಿ ತೆಂಗು ಸ್ವಲ್ಪ ಅಪರೂಪವೇ.] ತನ್ನ ಮುಂದಿರುವ ಕೆರೆ ಇತ್ಯಾದಿಗಳಿಗೆ ತಮ್ಮ ಇರವಿನಿಂದಾಗಿ ಅಭಯವನ್ನುಂಟುಮಾಡುತ್ತಿರುವಂತಿವೆ. ಇದು ವಾಸ್ತವವೂ ಹೌದು. ತೆಂಗು ನೆಲೆದ ಸವಕಳಿಯನ್ನು ತಡೆಯುತ್ತದೆ ಎಂಬುದು ಸರ್ವವಿದಿತ.

Comments
Post a Comment