END FOR THE DAY'S WORK....
ದಿನದ ಕಾಯಕದ ಸಮಾಪ್ತಿ...
ಕೆ.ಅರ.ಎಸ ನ ಹಿನ್ನೀರಿನ ಪ್ರದೇಶದಲ್ಲಿ ಕಂಡುಬಂದ ದೃಶ್ಯವಿದು. ಅಲ್ಲಿರುವ ವೇಣುಗೋಪಾಲಸ್ವಾಮಿ ದೇವಸ್ಥಾನವನ್ನು ಚಿತ್ರಿಸಲು ಹಲವಾರು ಬಾರಿ ಎಡತಾಕಿದ್ದೇನೆ, ನನ್ನ ಮಿತ್ರ-ಬಾಂಧವರನ್ನೂ ಕರೆದೊಯ್ದಿದ್ದೇನೆ. ಹಾಗೊಮ್ಮೆ ಹೋಗಿದ್ದಾಗ ಕಂಡಿದ್ದು ಇದು. ಆ ದೇಗುಲದ ಹಿಂದೆ ಸ್ವಲ್ಪ ದೂರದಲ್ಲಿ ನದೀತೀರದಲ್ಲಿ ಸರಕು-ಸಾಗಣೆ ರಿಕ್ಷಾ ಒಂದು ನಿಂತಿತ್ತು. ಅದರ ಯಜಮಾನನೂ ಕೆಲಸಗಾರನೂ ಅಲ್ಲೇ ಮಾತಾಡಿಕೊಳ್ಳುತ್ತಿದ್ದರು. ನನಗೆ ಕೈ ಬೆರಳೂ, ಮನಸ್ಸೂ ಚಡಪಡಿಸಿದವು. ಕ್ಯಾಮರಾ ಗುಂಡಿಯನ್ನೊತ್ತಿ ಶಾಂತಿಯನ್ನು ಹೊಂದಿದೆ.
ಇಡೀ ದೃಶ್ಯದಲ್ಲಿ ಇಬ್ಬರೇ ಇರುವುದು, ಈ ಸಮಯದಲ್ಲಿ ಮತ್ತೆ ಇನ್ಯಾರೂ ಆ ಪ್ರದೇಶದಲ್ಲೇ ಇರಲಿಲ್ಲ. ಹಾಗಾಗಿ ಅಲ್ಲಿ ಅವರಿಬ್ಬರದೇ ಏಕಾಂತ, ಅವರೊಂದಿಗೆ ಮೂಕಶ್ರೋತೃವಾಗಿ ಅವರ ವಾಹನ. ಇವಿಷ್ಟು ಬಿಟ್ಟರೆ ಮೇಲ್ತುದಿಯಲ್ಲಿ ಮುಳುಗುತ್ತಿರುವ ಸೂರ್ಯ ಮತ್ತು ಕೊನೆಯದಾಗಿ ಮೂರು ಸ್ತರಗಳಲ್ಲಿ ವಿಸ್ತಾರವಾಗಿ ಹರವಿಕೊಂಡಿರುವ ಅವಕಾಶ[Space]. ಈ ದೃಶ್ಯದಲ್ಲಿ ಮುಳುಗಿಬಿಟ್ಟಂತೇ ಕಾಣುವ ಸೂರ್ಯ, ನಿರ್ಜನವಾದ ವಾತಾವರಣ, ಸೂರ್ಯಾಸ್ತದ ಛಾಯೆ, ನಿಶ್ಚಲ ನದೀನೀರು ಇವೆಲ್ಲಾ "ದಿನ ಮುಗಿಯಿತು" ಎಂತೆಂಬ ಅನಾಸಕ್ತಿಯನ್ನು ತೋರಿಸುತ್ತವೆ. ಹಾಗೆ ಎಲ್ಲರೂ ಅನಾಸಕ್ತರಾಗಿದ್ದರಿಂದಲೇ [ದಿನದ ಕೆಲಸ ಮುಗಿಯಿತೆಂದು] ಆ ವಾಹನದವರಿಗೆ ಏಕಾಂತ- ಲೋಕಾಭಿರಾಮ ಮಾತುಕತೆ. ಇಲ್ಲವಾದರೆ ಆ ಕಾರ್ಮಿಕರಿಗೆಲ್ಲಿಯ ಬಿಡುವು?
ದೃಶ್ಯದಲ್ಲಿನ ಕೆಂಪು ಛಾಯೆ ಕೆಳಭಾಗದಲ್ಲಿ ಕಪ್ಪಗಾಗಿದ್ದು, ನೀರು- ನೆಲ- ಆಗಸ ಎಂಬ ವಸ್ತುಗಳಿಗನುಸಾರವಾಗಿ ವಿವಿಧ ಸ್ತರಗಳಲ್ಲಿ ಗಾಢತೆಯನ್ನು ಪಡೆದಿದೆ. ಬಲಗಡೆ ಮೇಲ್ತುದಿಯಲ್ಲಿರುವ ಸೂರ್ಯ ಕೂಡಾ ಈ ವರ್ಣವೈಷಮ್ಯದಲ್ಲಿ ಸೇರಿಹೋಗಿ, ಕೆಳಗೆ ಎಡತುದಿಯಲ್ಲಿರುವ ಆ ವಾಹನ ಮತ್ತು ಅವರಿಬ್ಬರನ್ನೇ ಎದ್ದು ಕಾಣಿಸುವಂತೆ ಮಾಡಿದೆ.

Comments
Post a Comment