PROHIBITION
ನಿರ್ಬಂಧ.
ಕಳೆದ ವಾರ ಸೂಚಿಸಲ್ಪಟ್ಟ ಅದೇ ಸ್ಥಳದ ಉತ್ತರದ ತುದಿಯಲ್ಲಿ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಹೋಗುವ ದಾರಿ ಸಾಗುತ್ತದೆ. ಈ ದಾರಿಯಲ್ಲಿ ಒಂದೆರಡು ಮಾರು ಹೋದರೆ ಅದೇ ಹಿನ್ನೀರಿನ ಪ್ರದೇಶ ಸಿಗುತ್ತದೆ. ಅಲ್ಲಿ ಈ ತಂತಿಗಳ ಬೇಲಿ ಹಾಕಲ್ಪಟ್ಟಿದೆ- ಹಿಂದಿನಿಂದಲೂ, ಸಹಜವಾಗಿ. ಸೂರ್ಯಾಸ್ತವನ್ನು ಚಿತ್ರಿಸಲು ಹೋದವನಿಗೆ ಇದೇಕೋ ಆಕರ್ಷಕವೆನ್ನಿಸಿತು, ಸಂಗ್ರಹಿಸಿದೆ, ಹೀಗೊಂದು ಮಾರ್ಪಾಡಿಗೆ ಮುಂದೆ ಇದು ದಾರಿಯಾಗಬಹುದೆಂದು ಎಂದೂ ಅನ್ನಿಸಿರಲಿಲ್ಲ.
ಪ್ರಶಾಂತವಾದ ಹಿನ್ನೀರು; ಹಿನ್ನೆಲೆಯಲ್ಲಿ ಮುಳುಗುತ್ತಿರುವ ಸೂರ್ಯ, ರಾಗರಂಜಿತವಾದ ಆಗಸ- ಇವೆಲ್ಲವೂ ಸಂಧ್ಯೆಯ ಸಂಭ್ರಮವನ್ನು ಮನಸ್ಸಿಗೆ ಕಟ್ಟಿಕೊಡುವುದಾದರೂ ಮುನ್ನೆಲೆಯಲ್ಲಿ ಕಾಣಬರುತ್ತಿರುವ ತಂತಿಬೇಲಿಯು ಇಡೀ ದೃಶ್ಯದ ಒಟ್ಟಂದವನ್ನು ಕ್ರೂರವಾಗಿ ಕೊಲ್ಲುತ್ತಿದೆ- "ನೀವು ಈ ಆನಂದವನ್ನು ಆಸ್ವಾದಿಸುವಂತಿಲ್ಲ " ಎಂಬರ್ಥದಲ್ಲಿ. ಅದಕ್ಕೆಂದೇ ಈ ಚಿತ್ರಕ್ಕೆ ನಿರ್ಬಂಧ ಎಂದು ಹೆಸರಿಸಿದ್ದು. ಈ ವೈರುಧ್ಯದ, ನಿಷೇಧದ ಪ್ರಸ್ತಾಪ ಮತ್ತು ನಿರೂಪಣೆ ಈಗೇಕೆ ಎಂಬುದು ಸದ್ಯೋವಿದ್ಯಮಾನಗಳನ್ನು ಬಲ್ಲವರಿಗೆ ಅರ್ಥವಾಗದಿರದು.
ತುಘಲಕ್ಕನ ಸೈನ್ಯದವರು ಬಂದು ಮುತ್ತಿಗೆ ಹಾಕಿದರೆ, ಈ ದೃಶ್ಯವೇ ನಮಗಾಗುವ ಗತಿಯಾಗುವುದು ಎಂಬುದು ನನ್ನ ಆತಂಕ. ನನ್ನ ಕೆಲಮಿತ್ರರು ಕಳೆದವಾರದ ಬರಹವನ್ನು ಓದಿ ಇದು ಇತಿಹಾಸವೇ? ಎಂದು ಕೇಳಿದ್ದರು, ಅವರಿಗೆಲ್ಲಾ ಈ ಮೂಲಕ ಸಣ್ಣ ಸ್ಪಷ್ಟನೆ.

Comments
Post a Comment